
ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ, ದಬ್ಬಾಳಿಕೆಯ ಪರಂಪರೆಯನ್ನು ಪ್ರತಿ ಹಂತದಲ್ಲೂ ಧಿಕ್ಕರಿಸಿದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ (58) ಹೈದರಾಬಾದ್ ನಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಯಿಬಾಬಾ ಅವರು ವಾರದ ಹಿಂದೆ ನಿಮ್ಸ್ ಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಅಕ್ಟೋಬರ್ 12ರ ರಾತ್ರಿ 8.30ಕ್ಕೆ ಕೊನೆಯುಸಿರೆಳೆದರು. ಪ್ರೊಫೆಸರ್ ಸಾಯಿಬಾಬಾರವರ ಆಶಯದಂತೆ ಅವರ ದೇಹವನ್ನು ಸಂಶೋಧನೆಗಾಗಿ ಗಾಂಧಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಯಿತು. ಅವರು ಈಗಾಗಲೇ ತಮ್ಮ ಕಣ್ಣುಗಳನ್ನು ಎಲ್.ವಿ.ಪ್ರಸಾದ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಜಿ.ಎನ್. ಸಾಯಿಬಾಬಾ ಅವರು ಬುಡಕಟ್ಟು ಜನರ ಹಕ್ಕುಗಳಿಗಾಗಿ ಅತ್ಯಂತ ಸಕ್ರಿಯ ಧ್ವನಿಯಾಗಿದ್ದರು. ಬಡವರ, ಶೋಷಿತರ ಪರ, ಅನ್ಯಾಯ, ಸಾಮಾಜಿಕ ದಬ್ಬಾಳಿಕೆ ವಿರುದ್ಧ ಸಕ್ರಿಯವಾಗಿ ಹೋರಾಟ ನಡೆಸಿದ್ದರು. ಅವರು ತಮ್ಮ ಸ್ವಾತಂತ್ರ್ಯ ಮತ್ತು ಆರೋಗ್ಯಕ್ಕೆ ಧಕ್ಕೆ ಬಂದಾಗಲೂ ತುಳಿತಕ್ಕೊಳಗಾದ ಜನರಿಗೆ ಅನ್ಯಾಯವಾದಾಗ ಅದರ ವಿರುದ್ಧ ದಣಿವರಿಯದ ಹೋರಾಟಗಾರರಾಗಿದ್ದರು.
ಐದನೇ ವಯಸ್ಸಿನಲ್ಲಿ ಪೋಲಿಯೊ
ಗೋಕರಕೊಂಡ ನಾಗಸಾಯಿ ಬಾಬಾ ಅವರು 1967 ರಲ್ಲಿ ಜನಿಸಿದರು. ಅವರು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದರು. ಅವರ ಮನೆಗೆ ವಿದ್ಯುತ್ ಕೂಡ ಇರಲಿಲ್ಲ. ಐದನೇ ವಯಸ್ಸಿನಲ್ಲಿ ಪೋಲಿಯೊದಿಂದ ಎರಡೂ ಕಾಲುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು. ಅವರು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ತಮ್ಮ ಪಿಜಿ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ (ಡಿಯು) ಪಿಎಚ್ಡಿ ಪೂರ್ಣಗೊಳಿಸಿದರು.
ಜೀವಾವಧಿ ಶಿಕ್ಷೆ
90 ಪ್ರತಿಶತ ಅಂಗವೈಕಲ್ಯದೊಂದಿಗೆ ಗಾಲಿಕುರ್ಚಿಗೆ ಸೀಮಿತವಾಗಿದ್ದ ಸಾಯಿಬಾಬಾ ಅವರು 2017 ರಿಂದ ಸುಮಾರು ಒಂಬತ್ತು ವರ್ಷಗಳ ಕಾಲ ನಾಗ್ಪುರ ಜೈಲಿನಲ್ಲಿದ್ದರೆ, ಅವರೂ ಸೇರಿದಂತೆ ಇತರ ಐವರಿಗೆ ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಮಹಾರಾಷ್ಟ್ರ ಗಡ್ಚಿರೋಲಿ ಟ್ರಯಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಈ ಹಿಂದೆಯೂ 2014ರಿಂದ 2016ರವರೆಗೆ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೇ ವರ್ಷ ಮಾರ್ಚ್ 5 ರಂದು ಮುಂಬೈ ಹೈಕೋರ್ಟ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ ನಾಗ್ಪುರ ಜೈಲಿನಿಂದ ಬಿಡುಗಡೆ ಮಾಡಿತು.
ಸಾಯಿಬಾಬಾ ಮಾನವ ಹಕ್ಕುಗಳ ಕಾರ್ಯಕರ್ತ, ಬರಹಗಾರ ಮತ್ತು ಶಿಕ್ಷಣತಜ್ಞ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರು ಜೈಲಿನಲ್ಲಿ ಕಷ್ಟದ ಜೀವನವನ್ನು ಕಳೆದರು. ಸಾಯಿಬಾಬಾ ಅವರು ಜೈಲಿನಲ್ಲಿದ್ದಾಗ ಪಿತ್ತಕೋಶದ ಸೋಂಕು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹಲವು ಬಾರಿ ಅರ್ಜಿ ಸಲ್ಲಿಸಿದರೂ ಕೇಂದ್ರ ಸರಕಾರವಾಗಲಿ, ಮಹಾರಾಷ್ಟ್ರ ಸರಕಾರವಾಗಲಿ ವೈದ್ಯಕೀಯ ನೆರವು ನೀಡಲಿಲ್ಲ. ಜೈಲಿನಿಂದ ಬಿಡುಗಡೆಯಾದ ನಂತರ ಅವರು ಹೈದರಾಬಾದ್ ನ ನಿಮ್ಸ್ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ನಿಗಾ ವಹಿಸಲಾಗಿದೆ ಎಂಬ ವರದಿಗಳ ಹೊರತಾಗಿಯೂ ಅವರು ಅಕ್ಟೋಬರ್ 12ರ ರಾತ್ರಿ ಸಾವನ್ನಪ್ಪಿದರು. ದೇಶದೆಲ್ಲೆಡೆ ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಸಾಯಿಬಾಬಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಜಾಪ್ರಭುತ್ವದ ಮೇಲೆ ಕಪ್ಪು ಚುಕ್ಕೆ
ಜಿ.ಎನ್. ಸಾಯಿಬಾಬಾರವರ ಸಾವು ಭಾರತದ ಪ್ರಜಾಪ್ರಭುತ್ವದ ಮೇಲೆ ಕಪ್ಪು ಚುಕ್ಕೆಯಾಗಿದೆ. ಇದು ಕೇವಲ ವ್ಯಕ್ತಿಯ ನಷ್ಟವಲ್ಲ; ಇದು ನಮ್ಮ ದೇಶದ ನ್ಯಾಯ ವ್ಯವಸ್ಥೆ ಹದಗೆಟ್ಟಿರುವುದನ್ನು ಮತ್ತು ಮೋದಿ ಸರ್ಕಾರದ ಮಾನವ ಹಕ್ಕುಗಳ ಉಲ್ಲಂಘನೆಯ ಪರಮಾವಧಿಯನ್ನು ಎತ್ತಿ ತೋರಿಸುವ ದುರಂತ ಘಟನೆಯಾಗಿದೆ.
ನ್ಯಾಯಕ್ಕಾಗಿ ಹೋರಾಡಿದ ಬುದ್ದಿಜೀವಿಯ ಬದುಕು ಇಷ್ಟೊಂದು ಕಹಿಯಾದದ್ದು ಅತ್ಯಂತ ದುಃಖಕರ ಸಂಗತಿ. ಚಿತ್ರಹಿಂಸೆಯನ್ನು ಎದುರಿಸುವ ಸಾಯಿಬಾಬಾರವರ ಧೈರ್ಯ ಮತ್ತು ಅವರ ತತ್ವಗಳಲ್ಲಿ ದೃಢತೆ ಶ್ಲಾಘನೀಯವಾದುದು. ಅವರ ಸಾವಿನ ಸಂಪೂರ್ಣ ಹೊಣೆಯನ್ನು ಮೋದಿ ಸರ್ಕಾರ ಹೊರಬೇಕು.
ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮೋದಿ ಸರ್ಕಾರವು ಮಾತನಾಡುವುದೆಲ್ಲವೂ ಕೇವಲ ಬೊಗಳೆ ಮಾತುಗಳು ಎಂಬುದನ್ನು ಸಾಯಿಬಾಬಾರವರ ಜೀವನ ಮತ್ತು ಮರಣವು ನಮಗೆ ಸ್ಪಷ್ಟವಾಗಿ ತೋರಿಸುತ್ತದೆ. ಅಂತರಾಷ್ಟ್ರೀಯ ಒಪ್ಪಂದಗಳು ಮತ್ತು ದೇಶೀಯ ಕಾನೂನುಗಳನ್ನು ಉಲ್ಲಂಘಿಸಿ ಅಂಗವಿಕಲ ವ್ಯಕ್ತಿಯನ್ನು ಕ್ರೂರವಾಗಿ ನಡೆಸಿಕೊಂಡ ಸರ್ಕಾರವು ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ.
ಈ ಸರ್ಕಾರದ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಕಲ್ಪನೆಯಾಗಿಬಿಟ್ಟಿದೆ. ಎಲ್ಲಾ ಭಿನ್ನಮತೀಯರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತದೆ. ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟಲಾಗಿದೆ. ಸಾಯಿಬಾಬಾ, ವರವರ ರಾವ್, ಸುಧಾ ಭಾರದ್ವಾಜ್ ಅವರಂತಹ ಬುದ್ಧಿಜೀವಿಗಳ ಜೀವನವೇ ಇದಕ್ಕೆ ಸಾಕ್ಷಿ.
ಸಾಯಿಬಾಬಾರವರ ಸಾವು ನಮ್ಮೆಲ್ಲರನ್ನೂ ಚಿಂತನೆಗೆ ಹಚ್ಚಬೇಕು. ಮೋದಿ ಆಡಳಿತದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು. ಈ ಸರ್ಕಾರದ ನೀತಿಗಳು ಬದಲಾಗಬೇಕು. ಮಾನವ ಹಕ್ಕುಗಳನ್ನು ಗೌರವಿಸಬೇಕು. ವಿಕಲಚೇತನರ ಹಕ್ಕುಗಳನ್ನು ರಕ್ಷಿಸಬೇಕು. ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ, ಭಾರತದ ಪ್ರಜಾಪ್ರಭುತ್ವವು ಕೇವಲ ನಾಮಮಾತ್ರವಾಗಿ ಉಳಿಯುತ್ತದೆ. ಪರ್ಯಾಯ ದೃಷ್ಟಿಕೋನ ಹೊಂದಿರುವವರನ್ನು ಹತ್ತಿಕ್ಕುವ ಬದಲು ಸಂವಾದದಲ್ಲಿ ತೊಡಗಬೇಕು. ಹಾಗಾದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಬೆಳೆಯುತ್ತದೆ.
ನಿಮ್ಮ ಟಿಪ್ಪಣಿ ಬರೆಯಿರಿ