
ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಪಕ್ಷದ ರಾಜಕೀಯ ನೀತಿಗಳನ್ನು ರೂಪಿಸುವ ಮತ್ತು ನಾಯಕತ್ವವನ್ನು ಆಯ್ಕೆ ಮಾಡುವ ಪ್ರಕ್ರಿಯೆ:
ಸಿಪಿಐ(ಎಂ) ತನ್ನ ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ಒಂದು ರಾಜಕೀಯ ಪಕ್ಷ. ಇದರಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಮಹಾಧಿವೇಶನಕ್ಕೆ ಮೂರು ತಿಂಗಳ ಮೊದಲು ಕರಡು ರಾಜಕೀಯ ನಿರ್ಣಯವನ್ನು ಪಕ್ಷವು ಸಾರ್ವಜನಿಕಗೊಳಿಸುತ್ತದೆ. ಪಕ್ಷದ ಘಟಕಗಳು ಮತ್ತು ಸದಸ್ಯರು ಕರಡು ರಾಜಕೀಯ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಲು ಮತ್ತು ತಿದ್ದುಪಡಿಗಳನ್ನು ಸೂಚಿಸಲು ಅವಕಾಶ ನೀಡಲಾಗುತ್ತದೆ. ಪಕ್ಷದ ರಾಜಕೀಯ ನೀತಿಯನ್ನು ರೂಪಿಸುವಲ್ಲಿ ಎಲ್ಲಾ ಘಟಕಗಳು, ಪಕ್ಷದ ಎಲ್ಲಾ ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗುತ್ತದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ) (CPIM)ನ 24ನೇ ಮಹಾಧಿವೇಶನ 2025 ಏಪ್ರಿಲ್ 2 ರಿಂದ 6 ರವರೆಗೆ ತಮಿಳುನಾಡಿನ ಮದುರೈ ನಲ್ಲಿ ನಡೆಯಲಿದೆ. ಮಹಾಧಿವೇಶನದಲ್ಲಿ ಮುಂದಿನ ಮೂರು ವರ್ಷಗಳ ಕಾಲ ಪಕ್ಷದ ರಾಜಕೀಯ ನಿರ್ದೇಶನವನ್ನು ರೂಪಿಸಲಾಗುವುದು. ಮಹಾಧಿವೇಶನದ ಅಂಗವಾಗಿ ಕರ್ನಾಟಕದಾದ್ಯಂತ ಶಾಖೆ (ಪಕ್ಷದ ಪ್ರಾಥಮಿಕ ಘಟಕ)ಗಳಿಂದ ಆರಂಭಿಸಿ ಸ್ಥಳೀಯ ಸಮಿತಿ, ವಯಲ ಸಮಿತಿ, ತಾಲೂಕು ಸಮಿತಿ, ಜಿಲ್ಲಾ ಸಮಿತಿ ಸಮ್ಮೇಳನಗಳು ನಡೆದು, ರಾಜ್ಯ ಸಮ್ಮೇಳನವು ಡಿಸೆಂಬರ್ 29, 30, 31ರಂದು ಮೂರು ದಿನಗಳ ಕಾಲ ತುಮಕೂರು ನಗರದಲ್ಲಿ ನಡೆದಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ರಚನೆ
ರಷ್ಯಾದ ಕ್ರಾಂತಿಯ ನಂತರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ)ವನ್ನು ಅಕ್ಟೋಬರ್ 17, 1920 ರಂದು ತಾಷ್ಕೆಂಟ್ (ಉಜ್ಬೇಕಿಸ್ತಾನ್ ರಾಜಧಾನಿ)ನಲ್ಲಿ ನಡೆದ ಭಾರತೀಯ ಕ್ರಾಂತಿಕಾರಿಗಳ ಸಭೆಯಲ್ಲಿ ರಚಿಸಲಾಯಿತು. ಪಕ್ಷದ ಮೊದಲ ಕಾರ್ಯದರ್ಶಿಯಾಗಿ ಮೊಹಮ್ಮದ್ ಶಫೀಕ್ ಆಯ್ಕೆಯಾದರು. ಭಾರತದ ನೆಲದಲ್ಲಿ ಮೊದಲ ಕಮ್ಯುನಿಸ್ಟ್ ಪಕ್ಷದ ಸಭೆಯು 1925ರ ಡಿಸೆಂಬರ್ 28ರಿಂದ 30 ರವರೆಗೆ ಕಾನ್ಪುರದಲ್ಲಿ ನಡೆಯಿತು. ಆಗ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರು ಭಾರತದಲ್ಲಿ ಸಮತಾವಾದವನ್ನು ಕಿತ್ತುಹಾಕಲು ದೃಢ ನಿಶ್ಚಯ ಮಾಡಿದ್ದರು. ಚಿಗುರೊಡೆಯುತ್ತಿದ್ದ ಕಮ್ಯೂನಿಸ್ಟ್ ಗುಂಪುಗಳ ಮೇಲೆ ಬ್ರಿಟಿಷರು ಪಾಶವೀ ದಮನವನ್ನು ಹರಿಯಬಿಟ್ಟರು. ಇಷ್ಟು ಮಾತ್ರವಲ್ಲ, ಭಾರತದಲ್ಲಿ ಕ್ರಾಂತಿಕಾರಿ ವಿಚಾರಗಳು ಹರಡುವುದನ್ನು ತಡೆಯಲು ಕಮ್ಯುನಿಸ್ಟ್ ಸಾಹಿತ್ಯವನ್ನೇ ನಿಷೇಧಿಸಿದರು. ಕಮ್ಯುನಿಸ್ಟ್ ಆಂದೋಲನದ ಯುವ ನಾಯಕತ್ವದ ವಿರುದ್ಧ ಪೇಶಾವರ್ (1922), ಕಾನ್ಪುರ್ (1924) ಮತ್ತು ಮೀರತ್ (1929) ಪಿತೂರಿ ಮೊಕದ್ದಮೆಗಳ ಸರಣಿಯನ್ನೇ ಹೆಣೆದರು. 1920ರ ದಶಕದಲ್ಲಿ ಪಕ್ಷ ಸ್ಥಾಪನೆಯಾದ ಸ್ವಲ್ಪವೇ ಸಮಯದಲ್ಲಿ ಪಕ್ಷವನ್ನು ಕಾನೂನುಬಾಹಿರ ಎಂದು ಘೋಷಿಸಲಾಯಿತು. ನಂತರದ ಎರಡು ದಶಕಗಳವರೆಗೆ ಪಕ್ಷವು ಕಾನೂನುಬಾಹಿರ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಬೇಕಾಯಿತು. (ಸಿಪಿಐ-ಎಂ ಪಕ್ಷದ ಕಾರ್ಯಕ್ರಮ 1.5)
ಆದ್ದರಿಂದ, ಕಮ್ಯುನಿಸ್ಟ್ ಪಕ್ಷದ ಮೊದಲ ಕಾಂಗ್ರೆಸ್ ಅನ್ನು 1943ರಲ್ಲಿ ಮಾತ್ರ ಕರೆಯಲಾಯಿತು. ಈ ಕಾಂಗ್ರೆಸ್ ಮೇ 23ರಿಂದ ಜೂನ್ 1 ರವರೆಗೆ ಮುಂಬೈನಲ್ಲಿ ಸಭೆ ಸೇರಿತ್ತು. ಐದು ವರ್ಷಗಳ ನಂತರ, 1948ರಲ್ಲಿ, ಎರಡನೇ ಕಾಂಗ್ರೆಸ್ ಕೋಲ್ಕತ್ತಾದಲ್ಲಿ ನಡೆಯಿತು. ಕಲ್ಕತ್ತಾ ಪ್ರಬಂಧಕ್ಕಾಗಿ ಪಕ್ಷವನ್ನು ಬೇಟೆಯಾಡಲಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿಯು ಮೊದಲಿನಿಂದಲೂ ಅನೇಕ ಬಿಕ್ಕಟ್ಟುಗಳನ್ನು ನಿವಾರಿಸಿಕೊಂಡು ಬೆಳೆಯಿತು.
1964 ರಲ್ಲಿ ಸಿಪಿಐ(ಎಂ) ರಚನೆ:
ತೀವ್ರವಾದ ಸೈದ್ಧಾಂತಿಕ ಹೋರಾಟದ ಪರಿಣಾಮವಾಗಿ, ಕ್ರಾಂತಿಯನ್ನು ಉತ್ತೇಜಿಸಲು 1964ರಲ್ಲಿ ಸಿಪಿಐ(ಎಂ) -ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್)- ರಚನೆಯಾಯಿತು. ಈ ಹಂತದಲ್ಲಿ, ಪಕ್ಷದ ಸಮ್ಮೇಳನಗಳನ್ನು ಸೇರುವ ಮೂಲಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಮುನ್ನಡೆಸಲು ಪಕ್ಷವು ಪ್ರಯತ್ನಿಸುತ್ತಿದೆ. ಏಪ್ರಿಲ್ 2022ರಲ್ಲಿ, 23ನೇ ಪಕ್ಷದ ಮಹಾಧಿವೇಶನ ಕಣ್ಣೂರಿನಲ್ಲಿ ನಡೆಯಿತು. ತದನಂತರದ ರಾಜಕೀಯ ಮತ್ತು ಸಾಂಸ್ಥಿಕ ಸಮಸ್ಯೆಗಳು ಮತ್ತು ಪ್ರತಿಯೊಂದು ಘಟಕಗಳ ಸದಸ್ಯರ ಚಟುವಟಿಕೆಗಳು ಮತ್ತು ದೌರ್ಬಲ್ಯಗಳ ಮೌಲ್ಯಮಾಪನ ಮತ್ತು ಕೂಲಂಕಷವಾಗಿ ಚರ್ಚಿಸಬೇಕಾದ ಸಂದರ್ಭವೇ ಈ 24ನೇ ಪಕ್ಷದ ಮಹಾಧಿವೇಶನ. ಎಲ್ಲಾ ಕಮ್ಯುನಿಸ್ಟ್ ಪಕ್ಷಗಳಲ್ಲಿರುವಂತೆ, ಈ ಪರೀಕ್ಷೆಗಳನ್ನು ಸ್ವಯಂ ವಿಮರ್ಶೆಯ ತತ್ವದ ಮೇಲೆ ನಡೆಸಲಾಗುತ್ತದೆ.
ಕಮ್ಯುನಿಸ್ಟ್ ಪಕ್ಷಗಳು ಜನರ ಹಿತಾಸಕ್ತಿಗಳಿಗೆ ಅನುಗುಣವಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ನೀತಿಗಳನ್ನು ರೂಪಿಸುತ್ತವೆ. ಶಾಖಾ ಮಟ್ಟದಿಂದ ಪಕ್ಷದ ಮಹಾಧಿವೇಶನದ ವರೆಗಿನ ಸಮ್ಮೇಳನಗಳು ಅದಕ್ಕೆ ಮುಖ್ಯ ವೇದಿಕೆಗಳಾಗಿವೆ. ಜನರ ವಿಶ್ವಾಸ ಗಳಿಸಲು ಮತ್ತು ಎಡಪಕ್ಷಗಳು ಬೆಳೆಯಲು ಸುಲಭ ಮಾರ್ಗವಿಲ್ಲ ಎಂಬ ದೃಢ ಮನವರಿಕೆಯೊಂದಿಗೆ ಮುನ್ನಡೆಯಲು ಚರ್ಚೆ ಮತ್ತು ನೀತಿ ನಿರೂಪಣೆಗಾಗಿ ಸಿಪಿಐ(ಎಂ) ಈ ಸಮಾವೇಶಗಳನ್ನು ನಡೆಸುತ್ತದೆ.
ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ಪಕ್ಷ:
ಸಿಪಿಐ(ಎಂ) ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ರಾಜಕೀಯ ಪಕ್ಷವಾಗಿದೆ. ಇದರಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ 3 ವರ್ಷಗಳಿಗೊಮ್ಮೆ ಶಾಖೆಗಳಿಂದ ಆರಂಭಿಸಿ ಎಲ್ಲ ಹಂತದ ಸಮ್ಮೇಳನಗಳು ನಡೆಯುತ್ತವೆ. ಶಾಖೆಗಳ ಸಮ್ಮೇಳನದಲ್ಲಿ ಆ ಶಾಖೆಯ ಎಲ್ಲಾ ಸದಸ್ಯರೂ ಭಾಗವಹಿಸುತ್ತಾರೆ. ಶಾಖಾ ಸಮ್ಮೇಳನದಲ್ಲಿ ನೂತನ ಶಾಖಾ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ. ಸ್ಥಳೀಯ ಸಮ್ಮೇಳನಗಳು, ವಯಲ, ತಾಲೂಕು, ಜಿಲ್ಲಾ ಸಮ್ಮೇಳನಗಳು ತಮ್ಮ ಮಟ್ಟದ ಕಾರ್ಯದರ್ಶಿಗಳನ್ನು ಮತ್ತು ಸಮಿತಿಗಳ ಸದಸ್ಯರನ್ನು ಆಯ್ಕೆಮಾಡಿಕೊಳ್ಳುತ್ತವೆ.
ಶಾಖೆಗಳೂ ಸೇರಿದಂತೆ ಪ್ರತಿಯೊಂದು ಸಮಿತಿಗಳ ಸಮ್ಮೇಳನಗಳಲ್ಲಿ ಮೇಲಿನ ಹಂತದ ಸಮ್ಮೇಳನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಎಲ್ಲಾ ಸಮ್ಮೇಳನಗಳಲ್ಲಿಯೂ ಸ್ಥಳೀಯ ಜನಸಾಮಾನ್ಯರ ಸಮಸ್ಯೆಗಳ ಕುರಿತಂತೆ, ರಾಜ್ಯ, ದೇಶ ಮತ್ತು ಅಂತರರಾಷ್ಟ್ರೀಯ ವಿಧ್ಯಮಾನಗಳ ಕುರಿತಂತೆ ಚರ್ಚಿಸಲಾಗುತ್ತದೆ. ಸಮ್ಮೇಳನದಲ್ಲಿ ಕಳೆದ ಮೂರು ವರ್ಷಗಳಿಂದ ಪಕ್ಷದ ಕಾರ್ಯವೈಖರಿಯನ್ನು ಆಧರಿಸಿ ಸಮಿತಿಯ ಕಾರ್ಯದರ್ಶಿ ವರದಿ ಮಂಡಿಸುತ್ತಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ವರದಿಯ ಮೇಲೆ ಚರ್ಚೆ ನಡೆಸಿದ ನಂತರ ಅದನ್ನು ಅಂಗೀಕರಿಸಲಾಗುತ್ತದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪಕ್ಷವು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ. ಜನಸಾಮಾನ್ಯರ ಸಮಸ್ಯೆಗಳ ಕುರಿತು ಜನಾಂದೋಲನವನ್ನು ಸಂಘಟಿಸಲು ಸಮ್ಮೇಳನವು ಸ್ಪಷ್ಟ ಕರೆ ನೀಡುತ್ತದೆ.
ಜಿಲ್ಲಾ ಸಮ್ಮೇಳನಗಳದಲ್ಲಿ ರಾಜ್ಯ ಸಮ್ಮೇಳನಕ್ಕೆ ಮತ್ತು ರಾಜ್ಯ ಸಮ್ಮೇಳನವು ಪಕ್ಷದ ಮಹಾಧಿವೇಶನಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತವೆ. ರಾಜ್ಯ ಸಮ್ಮೇಳನವು ರಾಜ್ಯದಲ್ಲಿ ಪಕ್ಷದ ರಾಜಕೀಯ ನಿಲುಮೆ ಹಾಗೂ ಸಂಘಟನಾ ಯೋಜನೆಗಳನ್ನು ನಿರ್ಧರಿಸುತ್ತದೆ. ಹಿಂದಿನ ರಾಜಕೀಯ-ಸಂಘಟನಾ ಚಟುವಟಿಕೆಗಳನ್ನು ವಿಮರ್ಶಿಸಿ ವರದಿಯನ್ನು ಅಂಗೀಕರಿಸುತ್ತದೆ. ರಾಜ್ಯ ಸಮಿತಿಯನ್ನು ಆರಿಸುತ್ತದೆ.
ದೇಶಕ್ಕೆ ಪಕ್ಷದ ಅತ್ಯುನ್ನತ ಅಂಗವೆಂದರೆ ಪಕ್ಷದ ಅಖಿಲ ಭಾರತ ಮಹಾಧಿವೇಶನ. ಪಕ್ಷದ ಮಹಾಧಿವೇಶನವನ್ನು ಕೇಂದ್ರ ಸಮಿತಿಯು ಸಾಮಾನ್ಯವಾಗಿ ಮೂರು ವರ್ಷಗಳಿಗೊಮ್ಮೆ ಕರೆಯುತ್ತದೆ. ಮಹಾಧಿವೇಶನ ಪಕ್ಷದ ಕೇಂದ್ರ ಸಮಿತಿಯನ್ನು ಆರಿಸುತ್ತದೆ. ಪಕ್ಷದ ಸಂವಿಧಾನವನ್ನು ಜಾರಿಗೊಳಿಸುವ, ಪಕ್ಷದ ಮಹಾಧಿವೇಶನದಲ್ಲಿ ಸ್ವೀಕರಿಸಲಾದ ರಾಜಕೀಯ ಧೋರಣೆ ಮತ್ತು ನಿರ್ಣಯಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಕೇಂದ್ರ ಸಮಿತಿಯದ್ದಾಗಿರುತ್ತದೆ. ಮುಂದಿನ ಮಹಾಧಿವೇಶನದವರೆಗೆ ಪಕ್ಷದ ರಾಜಕೀಯ ನಿಲುಮೆ, ಸಂಘಟನಾ ಯೋಜನೆಗಳನ್ನು ನಿರ್ಧರಿಸುತ್ತದೆ.
ಕೇಂದ್ರ ಸಮಿತಿಯು ಪ್ರಧಾನ ಕಾರ್ಯದರ್ಶಿಯನ್ನು ಮತ್ತು ಪಾಲಿಟ್ ಬ್ಯೂರೋ (ರಾಜಕೀಯ ಮಂಡಳಿ)ವನ್ನು ಆಯ್ಕೆಮಾಡುತ್ತದೆ. ಕೇಂದ್ರ ಸಮಿತಿಯ ಎರಡು ಸಭೆಗಳ ನಡುವಿನ ಅವಧಿಯಲ್ಲಿ ಕೇಂದ್ರ ಸಮಿತಿಯ ಕೆಲಸ ಕಾರ್ಯಗಳನ್ನು ಪೊಲಿಟ್ ಬ್ಯೂರೋ ನಡೆಸಿಕೊಂಡು ಹೋಗುತ್ತದೆ.
ಕೇಂದ್ರ ಸಮಿತಿಯು ತನ್ನ ಸದಸ್ಯರಿಂದಲೇ ಒಂದು ಕಾರ್ಯದರ್ಶಿ ಮಂಡಳಿಯನ್ನು ಆಯ್ಕೆಮಾಡುತ್ತದೆ. ಇದು ಪೊಲಿಟ್ ಬ್ಯೂರೋ ಮಾರ್ಗದರ್ಶನದಲ್ಲಿ ಪಕ್ಷದ ದೈನಂದಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತದೆ. ಮತ್ತು ಕೇಂದ್ರ ಸಮಿತಿಯ ತೀರ್ಮಾನಗಳನ್ನು ಜಾರಿಗೊಳಿಸಲು ಪೊಲಿಟ್ ಬ್ಯೂರೋ ಗೆ ಸಹಾಯ ಮಾಡುತ್ತದೆ.
ಮೂರು ತಿಂಗಳ ಮೊದಲು ಕರಡು ರಾಜಕೀಯ ನಿರ್ಣಯ:
ಪಕ್ಷದ ರಾಜಕೀಯ ನೀತಿಯನ್ನು ರೂಪಿಸುವಲ್ಲಿ ಎಲ್ಲಾ ಘಟಕಗಳು, ಪಕ್ಷದ ಎಲ್ಲಾ ಸದಸ್ಯರು ಭಾಗವಹಿಸಲು ಸಿಪಿಐ(ಎಂ) ಅವಕಾಶ ನೀಡುತ್ತದೆ. ಪಕ್ಷದ ಮಹಾಧಿವೇಶನಕ್ಕೆ ಮೂರು ತಿಂಗಳ ಮೊದಲು ಕರಡು ರಾಜಕೀಯ ನಿರ್ಣಯವನ್ನು ಪಕ್ಷವು ಸಾರ್ವಜನಿಕಗೊಳಿಸುತ್ತದೆ. ಪಕ್ಷದ ಘಟಕಗಳು ಮತ್ತು ಸದಸ್ಯರು ಕರಡು ರಾಜಕೀಯ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಲು ಮತ್ತು ತಿದ್ದುಪಡಿಗಳನ್ನು ಸೂಚಿಸಲು ಅವಕಾಶ ನೀಡಲಾಗುತ್ತದೆ. ಈ ರೀತಿ ಬಂದ ಎಲ್ಲಾ ತಿದ್ದುಪಡಿಗಳನ್ನು ಪರಿಶೀಲಿಸಿ ಕರಡಿನ ಭಾಗವಾಗಿ ಅಂಗೀಕರಿಸಬೇಕಾದವುಗಳನ್ನು ತೆಗೆದುಕೊಂಡು, ಅಲ್ಲದವುಗಳನ್ನು ತಿರಸ್ಕರಿಸಿದ ನಂತರ, ಕರಡು ರಾಜಕೀಯ ನೀತಿಯನ್ನು ಪಕ್ಷದ ಮಹಾಧಿವೇಶನಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ. ಪಕ್ಷದ ಮಹಾಧಿವೇಶನವು ಪ್ರತಿನಿಧಿಗಳ ಚರ್ಚೆಯ ಆಧಾರದ ಮೇಲೆ ಈ ನಿರ್ಣಯವನ್ನು ಮತ್ತೊಮ್ಮೆ ನವೀಕರಿಸಲಾಗುತ್ತದೆ. ಹೀಗೆ ಒಪ್ಪಿಕೊಂಡ ರಾಜಕೀಯ ರೇಖೆಯೇ ಮುಂದಿನ ಮೂರು ವರ್ಷಗಳ ಚಟುವಟಿಕೆಗಳಿಗೆ ಆಧಾರವಾಗಲಿದೆ. ಪಕ್ಷದ ರಾಜಕೀಯ ಕಾರ್ಯತಂತ್ರದ ನಿಲುವನ್ನು ರೂಪಿಸುವಲ್ಲಿ, ಪಕ್ಷದೊಳಗಿನ ಈ ಆಂತರಿಕ ಪ್ರಜಾಸತ್ತಾತ್ಮಕ ಕಸರತ್ತು ಸಿಪಿಎಂನ ವಿಶಿಷ್ಟತೆಯಾಗಿದೆ.
ನಾಯಕತ್ವದ ಕೆಲಸವನ್ನು ಕಠಿಣ ಪರಿಶೀಲನೆ ಮತ್ತು ಮೌಲ್ಯಮಾಪನ:
ಮೂರು ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಈ ಎಲ್ಲಾ ಹಂತಗಳ ಸಮ್ಮೇಳನಗಳಲ್ಲಿ ಜಾಗತಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಸಮಸ್ಯೆಗಳಲ್ಲದೆ, ನಾಯಕತ್ವದ ಕೆಲಸವನ್ನು ಕೂಡಾ ಕಠಿಣ ಪರಿಶೀಲನೆ ಮತ್ತು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಇದು ಪಕ್ಷದ ಸದಸ್ಯರು, ಬೆಂಬಲಿಗರು ಮತ್ತು ಪಕ್ಷವನ್ನು ಪ್ರೀತಿಸುವ ಯುವಜನತೆ ಮತ್ತು ಹಿರಿಯರನ್ನು ಒಳಗೊಂಡ ಅತ್ಯಂತ ವ್ಯಾಪಕವಾದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿದೆ. ಈ ಚರ್ಚೆಗಳು ಮತ್ತು ವಿವಿಧ ಹಂತಗಳಲ್ಲಿನ ಚರ್ಚೆಗಳ ಆಧಾರದ ಮೇಲೆ ಮುಂದಿನ ಮೂರು ವರ್ಷಗಳ ಪಕ್ಷದ ನೀತಿ ವಿಧಾನಗಳನ್ನು ನಿರ್ಧರಿಸಲಾಗುತ್ತದೆ.
ಈ ರೀತಿಯಲ್ಲಿ ವ್ಯಾಪಕವಾದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಪಕ್ಷದ ರಾಜಕೀಯ ನೀತಿಗಳನ್ನು ರೂಪಿಸುವ ಮತ್ತು ನಾಯಕತ್ವವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇತರೆ ಪಕ್ಷಗಳಲ್ಲಿ ಇಲ್ಲ. ಆಳುವ ಪಕ್ಷಗಳು ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಧಿಪತ್ಯ ಚಾಲ್ತಿಯಲ್ಲಿದೆ. ಕಾಂಗ್ರೆಸ್ ನ ಹೈಕಮಾಂಡ್ ಎಂದರೆ ಅದು ನೆಹರು ಕುಟುಂಬ. ಪಕ್ಷದ ನೀತಿ ಹೇಗಿರಬೇಕು, ಯಾವ ರಾಜ್ಯದಲ್ಲಿ ಯಾರು ನಾಯಕತ್ವ ವಹಿಸಬೇಕೆಂಬುದನ್ನು ಆ ಕುಟುಂಬ ನಿರ್ಧರಿಸುತ್ತದೆ. ಮತ್ತೊಂದೆಡೆ, ಬಿಜೆಪಿಯಲ್ಲಿ, ಮಾತೃ ಸಂಸ್ಥೆ ಆರ್ ಎಸ್ ಎಸ್ ನ ಸಿದ್ಧಾಂತದ ಪ್ರಕಾರ ನೀತಿ ಮತ್ತು ನಾಯಕತ್ವವನ್ನು ನಿರ್ಧರಿಸಲಾಗುತ್ತದೆ. ಸಿಪಿಐ(ಎಂ) ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ನೀತಿ ಮತ್ತು ನಾಯಕತ್ವವನ್ನು ನಿರ್ಧರಿಸುವ ಪಕ್ಷವಾಗಿದೆ.
18ನೇ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಒಕ್ಕೂಟ ತತ್ವಗಳ ಮೇಲಿನ ದಾಳಿಗಳನ್ನು ಸಮರ್ಥವಾಗಿ ಎದುರಿಸಲು, ಹಿಂದುತ್ವದ ಅಜೆಂಡಾದ ವಿರುದ್ಧ ವಿಶಾಲವಾದ ಒಗ್ಗಟ್ಟನ್ನು ರೂಪಿಸಲು, ಎಡಪಕ್ಷಗಳ ವಿಶಾಲ ಏಕತೆಯನ್ನು ಉತ್ತೇಜಿಸಲು, ಸಿಪಿಐ-ಎಂ ಅನ್ನು ಮತ್ತಷ್ಟು ಬಲಪಡಿಸಲು 24ನೇ ಪಕ್ಷದ ಮಹಾಧಿವೇಶನ ಅಗತ್ಯವಾದ ನೀತಿಗಳನ್ನು ರೂಪಿಸಲಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಭಾರತದ ಕಾರ್ಮಿಕ ವರ್ಗದ ಕ್ರಾಂತಿಕಾರಿ ಮುಂಚೂಣಿಯಾಗಿದೆ. ಶ್ರಮಜೀವಿ ಸರ್ವಾಧಿಕಾರದ ಪ್ರಭುತ್ವವನ್ನು ಸ್ಥಾಪಿಸುವ ಮೂಲಕ ಸಮಾಜವಾದ ಮತ್ತು ಸಮತಾವಾದವನ್ನು ಸಾಧಿಸುವುದು ಅದರ ಗುರಿಯಾಗಿದೆ. ಪಕ್ಷವು ತನ್ನ ಎಲ್ಲಾ ಚಟುವಟಿಕೆಗಳಲ್ಲಿ ಮಾರ್ಕ್ಸ್ವಾದ-ಲೆನಿನ್ ವಾದದ ತತ್ವ ಮತ್ತು ನೀತಿಗಳಿಂದ ಮಾರ್ಗದರ್ಶನ ಪಡೆಯುತ್ತದೆ. ಆ ತತ್ವವು ಶ್ರಮಜೀವಿಗಳಿಗೆ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗೊಳಿಸಿ, ಅವರ ಸಂಪೂರ್ಣ ವಿಮೋಚನೆಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಪಕ್ಷವು ಶ್ರಮಜೀವಿ ವರ್ಗದ ಅಂತರಾಷ್ಟ್ರೀಯತೆಯ ಪತಾಕೆಯನ್ನು ಎತ್ತಿ ಹಿಡಿಯುತ್ತದೆ.
ನಿಮ್ಮ ಟಿಪ್ಪಣಿ ಬರೆಯಿರಿ